ಆಸ್ಟ್ರೇಲಿಯಾದಲ್ಲಿ ಟಿ-20 ಸರಣಿ ಸೋತ ಶ್ರೀಲಂಕಾ ತಂಡ ಭಾರತದಲ್ಲಾದರೂ ಚುಟುಕು ಸರಣಿ ಗೆಲ್ಲಬೇಕು ಅನ್ನುವ ಕನಸಿನೊಂದಿಗೆ ಉಪಖಂಡಕ್ಕೆ ಕಾಲಿಟ್ಟಿತ್ತು. ಆದರೆ ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲೇ ಸಿಂಹಳೀಯ ತಂಡ 62 ರನ್ಗಳ ಹೀನಾಯ ಸೋಲನುಭವಿಸಿದೆ. 2ನೇ ಟಿ20 ಪಂದ್ಯದಲ್ಲಾದರೂ ಫೈಟ್ ನೀಡಬೇಕು ಅನ್ನುವ ಯೋಚನೆ ಮಾಡಿದ್ದ ಲಂಕಾ ತಂಡಕ್ಕೆ ಈಗ ಪಂದ್ಯ ಆರಂಭಕ್ಕೆ ಮುನ್ನವೇ ಶಾಕ್ ಎದುರಾಗಿದೆ.
ಶ್ರೀಲಂಕಾ ತಂಡದಲ್ಲಿ ಗಾಯದ ಸಮಸ್ಯೆ ದೊಡ್ಡದಾಗಿದೆ. ಆಫ್ ಸ್ಪಿನ್ನರ್ ಮಹೀಶ್ ತೀಕ್ಷಣ ಮತ್ತು ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿದ್ದಾರೆ. ಟಿ20 ಕ್ರಿಕೆಟ್ನ ನಂಬರ್ ವನ್ ಆಲ್ರೌಂಡರ್ ವನಿಂದು ಹಸರಂಗ ಕೊರೊನಾ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದಾರೆ.
ಶ್ರೀಲಂಕಾ ತಂಡ ಧನಂಜಯ ಡಿ ಸಿಲ್ವಾ ಮತ್ತು ನಿರೋಷನ್ ಡಿಕ್ವೆಲ್ಲಾ ಅವರನ್ನು ಟಿ20 ತಂಡಕ್ಕೆ ಸೇರಿಸಿದೆ. ಆದರೆ 2ನೇ ಪಂದ್ಯಕ್ಕೆ ಈ ಆಟಗಾರರು ಲಭ್ಯ ಇರುವುದು ಸಂಶಯವಾಗಿದೆ. ಒಟ್ಟಿನಲ್ಲಿ ಸತತ ಪಂದ್ಯಗಳ ಒತ್ತಡ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆಯನ್ನು ಹೆಚ್ಚಿಸಿದೆ.