ರಿಷಬ್ ಪಂತ್ (93 ರನ್) ಮತ್ತು ಶ್ರೇಯಸ್ ಅಯ್ಯರ್ (87 ರನ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಆತಿಥೇಯ ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಶುಕ್ರವಾರ ಇಲ್ಲಿನ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 314 ರನ್ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ತಂಡ ದಿನದಾಟದ ಅಂತ್ಯದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೇ 7 ರನ್ ಗಳಿಸಿದೆ.
ಎರಡನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ಭಾರತ ತಂಡಕ್ಕೆ ಸ್ಪಿನ್ನರ್ ತೈಜುಲ್ ಇಸ್ಲಾಮ್ ಆಘಾತ ನೀಡಿದರು. ಕೆ.ಎಲ್.ರಾಹುಲ್ (10), ಶುಭಮನ್ ಗಿಲ್ (20), ಚೇತೇಶ್ವರ ಪೂಜಾರ (24) ತೈಜುಲ್ಗೆ ಬಲಿಯಾದರು. ವಿರಾಟ್ ಕೊಹ್ಲಿ 24 ರನ್ ಗಳಿಸಿ ತಸ್ಕಿನ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದರು.
94 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಷಕ್ಟದಲ್ಲಿದ್ದ ಟೀಮ್ ಇಂಡಿಯಾಗೆ ನೆರವಾಗಿದ್ದು ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್. ಈ ಜೋಡಿ 159 ರನ್ಗಳ ಜೊತೆಯಾಟ ನೀಡಿ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ನೀಡುವಲ್ಲಿ ಯಶಸ್ವಿಯಾದರು.
ಬಾಂಗ್ಲಾ ಬೌಲರ್ಗಳನ್ನು ಚೆಂಡಾಡಿದ ರಿಷಬ್ ಪಂತ್ 93 ರನ್ ( 104 ಎಸೆತ, 7 ಬೌಂಡರಿ,5 ಸಿಕ್ಸರ್), ಶ್ರೇಯಸ್ ಅಯ್ಯರ್ 87 ರನ್ (105 ಎಸೆತ,10 ಬೌಂಡರಿ 2 ಸಿಕ್ಸರ್) ಸಿಡಿಸಿದರು. ನಂತರ ಬಂದ ಅಕ್ಸರ್ ಪಟೇಲ್ 4, ಆರ್.ಅಶ್ವಿನ್ 12, ಜಯದೇವ್ ಉನಾದ್ಕತ್ ಅಜೇಯ 14, ಮೊಹ್ಮದ್ ಸಿರಾಜ್ 7 ರನ್ ಗಳಿಸಿದರು.
ಬಾಂಗ್ಲಾ ಪರ ತೈಜುಲ್ ಇಸ್ಲಾಮ್ 74ಕ್ಕೆ 4,ಶಕೀಬ್ ಅಲ್ ಹಸನ್ 79ಕ್ಕೆ 4, ತಸ್ಕಿನ್ ಅಹ್ಮದ್ 58ಕ್ಕೆ 1, ಮೆಹದಿ ಹಸನ್ 61ಕ್ಕೆ 1 ವಿಕೆಟ್ ಪಡೆದರು.
ದಿನದಾಟದ ಅಂತ್ಯದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ಪರ ನಜ್ಮುಲ್ ಶಾಂಟೊ ಅಜೇಯ 5,ಜಾಕೀರ್ ಹಸನ್ ಅಜೇಯ 2 ರನ್ಗಳಿಸಿ ಮೂರನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.