ಸತತವಾಗಿ ಕ್ರಿಕೆಟ್ ಆಡುತ್ತಿರುವ ಟೀಮ್ ಇಂಡಿಯಾದಲ್ಲಿ ಗಾಯದ ಸಮಸ್ಯೆ ಹೆಚ್ಚಾಗುತ್ತಿದೆ. ಬಯೋ ಬಬಲ್ನ ಒತ್ತಡ ಮತ್ತು ಬಿಡುವಿಲ್ಲದ ವೇಳಾಪಟ್ಟಿ ಕ್ರಿಕೆಟಿಗರ ತಲೆ ಕೆಡಿಸಿದೆ. ಟೀಮ್ ಇಂಡಿಯಾದ ಹಲವು ಆಟಗಾರರು ಗಾಯಗೊಂಡಿದ್ದಾರೆ.
ವೆಸ್ಟ್ಇಂಡೀಸ್ ಸರಣಿ ವೇಳೆ ವಾಷಿಂಗ್ಟನ್ ಸುಂದರ್, ಕೆ.ಎಲ್. ರಾಹುಲ್ ಮತ್ತು ದೀಪಕ್ ಚಾಹರ್ ಗಾಯಗೊಂಡಿದ್ದರು. ಶ್ರೀಲಂಕಾ ಸರಣಿಯ ಆರಂಭಕ್ಕೆ ಮುನ್ನ ಸೂರ್ಯ ಕುಮಾರ್ ಯಾದವ್ ಗಾಯಾಳುವಾಗಿದ್ದರು. ಆದರೆ ಈ ಇಂಜ್ಯುರಿ ಲಿಸ್ಟ್ ಅಲ್ಲಿಗೆ ಮುಗಿದಿಲ್ಲ. ಮೊದಲ ಟಿ20 ಆರಂಭಕ್ಕೆ ಕೆಲವೇ ಗಂಟೆಗಳ ಮುನ್ನ ರುತುರಾಜ್ ಗಾಯಕ್ವಾಡ್ ಗಾಯಗೊಂಡು ತಂಡದಿಂದ ಹೊರ ಬಿದ್ದಿದ್ದಾರೆ.
ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧದ ಸರಣಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ಗೆ ವಿರಾಮ ನೀಡಿತ್ತು. ಈಗ ಗಾಯಾಳುಗಳ ಸಮಸ್ಯೆ ಟೀಮ್ ಇಂಡಿಯಾವನ್ನು ಕಾಡುತ್ತಿದೆ. ಬಿಸಿಸಿಐ ಟೆಸ್ಟ್ ಸರಣಿಗೆ ಧರ್ಮಶಾಲಾದಲ್ಲಿ ಅಭ್ಯಾಸ ನಡೆಸುತ್ತಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ವಿಶ್ವಕಪ್ ಹತ್ತಿರದಲ್ಲೇ ಇರುವ ಸಮಯದಲ್ಲಿ ಆಟಗಾರರು ಗಾಯಗೊಳ್ಳುತ್ತಿರುವುದು ಮತ್ತು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವುದು ಚಿಂತೆಗೆ ಕಾರಣವಾಗಿದೆ.