ಪ್ರಯತ್ನ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತು ಈ ಪ್ಲೇಯರ್ ಗೆ ನೂರಕ್ಕೆ ನೂರು ಅನ್ವಯಿಸುತ್ತದೆ. ಕೆಕೆಆರ್ ಮ್ಯಾನೇಜ್ಮೆಂಟ್ ಹೇಳಿದ ಒಂದು ಮಾತು ಎದುರಾಳಿ ಬ್ಯಾಟ್ಸ್ ಮನ್ ಗಳ ನಿದ್ದೆ ಗೆಡಿಸುವಂತೆ ಮಾಡಿದೆ. ಪಂದ್ಯದಿಂದ ಪಂದ್ಯಕ್ಕೆ ತಮ್ಮ ಬಿಗುವಿನ ಎಸೆತಗಳ ಮೂಲಕವೇ ವಿಕೆಟ್ ಬೇಟೆ ನಡೆಸುತ್ತಿರುವ ವೇಗಿ, ಟೀಮ್ ಇಂಡಿಯಾದ ಚುಟುಕು ಫಾರ್ಮೆಟ್ ಗೆ ಮತ್ತೆ ಕಂಬ್ಯಾಕ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಿಕ ಪಂದ್ಯದಲ್ಲಿ ಮನಮೋಹಕ ದಾಳಿ ಸಂಘಟಿಸಿ ಎಲ್ಲರ ಚಿತ್ತ ಕದ್ದ ಆಟಗಾರ ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಉಮೇಶ್ ಯಾದವ್. ಐಪಿಎಲ್ ಆರಂಭಕ್ಕೂ ಮುನ್ನ ಉಮೇಶ್ ಯಾದವ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಆರಂಭದಲ್ಲಿ ನೀಡಿದ ಭರ್ಜರಿ ಪ್ರದರ್ಶನ ಪ್ರಸಕ್ತ ಸಾಲಿನ ತಂಡದಲ್ಲಿ ಖಾಯಂ ಸ್ಥಾನ ಲಭಿಸುವಂತೆ ಮಾಡಿದೆ. ಶ್ರೇಯಸ್ ಅಯ್ಯರ್ ಇವರ ಬಳಿಗೆ ಚೆಂಡನ್ನು ನೀಡಿದರೆ ಸಾಕು, ಚೆಂಡು ಇವರ ಮಾತನ್ನು ಕೇಳಲು ಆರಂಭಿಸುತ್ತದೆ. ತಮ್ಮ ಬತ್ತಳಿಕೆಯ ಅಸ್ತ್ರಗಳನ್ನು ಬಳಸಿ ಬ್ಯಾಟ್ಸ್ ಮನ್ ಗಳನ್ನು ಸೆಟ್ ಮಾಡುವ ಉಮೇಶ್ ನಂತರ ಅವರ ವಿಕೆಟ್ ಪಡೆದು ಬೀಗುತ್ತಾರೆ.
ತಮ್ಮ ವೃತ್ತಿ ಜೀವನದ ಸಂಧ್ಯಾ ಕಾಲದ ಹತ್ತಿರ ನಿಂತಿರುವ ಉಮೇಶ್ ಗೆ ಈ ಬಾರಿಯ ಐಪಿಎಲ್ ತಣ್ಣನೆಯ ಗಾಳಿಯನ್ನು ನೀಡಿದ ಅನುಭವ ತರದೆ ಇರದು. ಅಸಲಿಗೆ ಈ ವೇಗದ ಬೌಲರ್ ನ್ನು ಮೇಗಾ ಹರಾಜಿನಲ್ಲಿ ಕಡಣನೆ ಮಾಡಲಾಗಿತ್ತು ಅಂದರೆ ತಪ್ಪಾಗಲಾರದು. ಎರಡು ಬಾರಿ ಅನ್ ಸೋಲ್ಡ್ ಆಗಿದ್ದ ಇವರನ್ನು ಕೆಕೆಆರ್ ಮೂಲ ಬೆಲೆಗೆ ಖರೀದಿಸಿತು. ಈಗ ಉಮೇಶ್ ಯಾದವ್ ನೀಡುತ್ತಿರುವ ಪ್ರದರ್ಶನ ಉಳಿದ ಫ್ರಾಂಚೈಸಿಗಳು ಕೈ ಕೈ ಹಿಚಿಕಿಕೊಳ್ಳುವಂತೆ ಮಾಡಿದೆ.
ನಿಜಕ್ಕೂ ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಅಚ್ಚರಿಯ ಪ್ಯಾಕೇಜ್ ಎಂದರೆ ಅದು ಉಮೇಶ್ ಯಾದವ್. ಕೆಕೆಆರ್ ತಂಡ ವೇಗಿಯನ್ನು ಸರಿಯಾಗಿ ಬಳಿಸಕೊಳ್ಳುತ್ತಿದೆ. ಪವರ್ ಪ್ಲೇ ಆಗಿರಲಿ, ಡೆತ್ ಓವರ್ ಆಗಿರಲಿ ಉಮೇಶ್ ಕೈಗೆ ಚೆಂಡನ್ನು ನೀಡಿದರೆ ರನ್ ವೇಗಕ್ಕೆ ಕಡಿವಾಣ ಗ್ಯಾರಂಟಿ. ಚೆನ್ನೈ ವಿರುದ್ಧ ಆರಂಭಿಕ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರೆ, ಆರ್ ಸಿಬಿ ವಿರುದ್ಧ ಆರಂಭಿಕ ಅನುಜ್ ರಾವತ್ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಖೆಡ್ಡಾ ತೋಡಿ ಮತ್ತೊಮ್ಮೆ ಕ್ಷಮತೆಯನ್ನು ಸಾಬೀತು ಪಡಿಸಿದರು.
ಪಂಜಾಬ್ ವಿರುದ್ಧವೂ ಉಮೇಶ್ ಅಬ್ಬರಿಸಿದರು. ಆರಂಭದಲ್ಲೇ ಮಯಾಂಕ್ ಅವರಿಗೆ ಖೆಡ್ಡಾ ತೋಡಿದ ವೇಗಿ, ಒಂಬತ್ತನೇ ಓವರ್ ನಲ್ಲಿ ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಪೆವಿಲಿಯನ್ ಗೆ ಕಳಿಸಿದರು. ತಮ್ಮ ಕೋಟಾದ ಕೊನೆಯ ಓವರ್ ನಲ್ಲಿ ಉಮೇಶ್ ಅಬ್ಬರಿಸಿದರು. ಎರಡನೇ ಎಸೆತದಲ್ಲಿ ಹರ್ಪ್ರಿತ್ ಅವರನ್ನು ಬೋಲ್ಡ್ ಮಾಡಿದರೆ, ನಾಲ್ಕನೇ ಎಸೆತದಲ್ಲಿ ರಾಹುಲ್ ಚಹಾರ್ ಗೆ ಕಂಠಕವಾದರು. ತಮ್ಮ ಸೊಗಸಾದ ದಾಳಿಯಲ್ಲಿ ಉಮೇಶ್ ಪಂಜಾಬ್ ತಂಡದ ಬ್ಯಾಟಿಂಗ್ ಬೆನ್ನೆಲೆಬು ಮುರಿದರು.