ಆರೇಳು ವರ್ಷಗಳ ಹಿಂದೆ ದೇಶೀಯ ಕ್ರಿಕೆಟನ್ನು ಅಕ್ಷರಶಃ ಆಳಿದ್ದ Karnataka Ranji Team/ ಕರ್ನಾಟಕ ರಣಜಿ ತಂಡದ ಬಗ್ಗೆ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೇ ಹತಾಶೆಯಿಂದ ಮಾತನಾಡುತ್ತಾರೆ ಎಂದರೆ ತಂಡ ಯಾವ ಸ್ಥಿತಿಗೆ ಬಂದು ತಲುಪಿದೆ, ಜಸ್ಟ್ ಊಹೆ ಮಾಡಿಕೊಳ್ಳಿ.
ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಮತ್ತೊಂದು ನಿರಾಸೆಯ ವರ್ಷ ಅಂತ್ಯವಾಗುತ್ತಿದ್ದಂತೆ KSCA ಅಧ್ಯಕ್ಷ ರೋಜರ್ ಬಿನ್ನಿಯವರ ರಕ್ತ ಕುದಿಯುತ್ತಿದೆ. ಸೀನಿಯರ್ ಆಟಗಾರರು, ಆಯ್ಕೆ ಸಮಿತಿ, ಟೀಮ್ ಮ್ಯಾನೇಜ್ಮೆಂಟ್.. ಹೀಗೆ ಎಲ್ಲರ ಮೇಲೂ ಬಿನ್ನಿ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದಾರೆ. ಇದೇ ರಕ್ತ, ತಂಡವನ್ನು ಆಯ್ಕೆ ಮಾಡಿದಾಗ ಕುದಿಯಲಿಲ್ಲವೇಕೆ..? ಇದೇ ಆಕ್ರೋಶ ಆಗ ಇರಲಿಲ್ಲವೇಕೆ..? ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಲು ಹೊರಟಿದ್ದೀರಾ ಮಿಸ್ಟರ್ ಬಿನ್ನಿ..? KSCA – Karnataka Ranji Team – Roger Binny KSCA President
ರನ್ ಗಳಿಸುವುದನ್ನೇ ಮರೆತು ಬಿಟ್ಟಂತಿರುವ ಆಟಗಾರನೊಬ್ಬ ಯಾರದ್ದೋ ಕೃಪೆಯಿಂದ ಕಳೆದ 3-4 ವರ್ಷಗಳಿಂದ ಆಡುತ್ತಲೇ ಇದ್ದಾಗ ಯಾಕೆ ಮಾತನಾಡಲಿಲ್ಲ ಬಿನ್ನಿಯವರೇ..? ನಮ್ಮ ದೊಡ್ಡ ದೊಡ್ಡ ಸ್ಟಾರ್’ಗಳು ‘ಗಂಡ ಭೇರುಂಡ’ದ ಬಗ್ಗೆ, ರಾಜ್ಯದ ಬಗ್ಗೆ ಅಭಿಮಾನ, ಹೆಮ್ಮೆಯೇ ಇಲ್ಲದಂತೆ ಆಡುತ್ತಿರುವುದು ಇದೇ ಮೊದಲಾ ಬಿನ್ನಿಯವರೇ..? ಆಗೆಲ್ಲಾ ‘ಧೃತರಾಷ್ಟ್ರ’ನಂತೆ ಸುಮ್ಮನಿದ್ದು ಈಗ ಅಬ್ಬರಿಸುತ್ತಿದ್ದೀರಲ್ಲಾ.. ಇದೇ ಕೆಲಸವನ್ನು ತಂಡದ ಆಯ್ಕೆಗೂ ಮೊದಲೇ ಮಾಡಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ, ಅಲ್ಲವೇ ಬಿನ್ನಿಯವರೇ..!
ಕರ್ನಾಟಕ ತಂಡವನ್ನು ‘ಅಪ್ಪನ ಮನೆಯ ಆಸ್ತಿ’ ಮಾಡಿಕೊಂಡಿದ್ದ ಹೊಣೆಗೇಡಿಗಳನ್ನು ಒದ್ದು ಓಡಿಸಿದ ಮೇಲೆಯೇ ಕರ್ನಾಟಕ ಬೆನ್ನು ಬೆನ್ನಿಗೆ ಎರಡು ಬಾರಿ ರಣಜಿ ಟ್ರೋಫಿ ಗೆದ್ದದ್ದು. ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಆರ್.ಸಮರ್ಥ್’ರಂತಹ ಸಮರ್ಥರು ಬಂದು ಕರ್ನಾಟಕಕ್ಕೆ ಎರಡೆರಡು ಬಾರಿ ರಣಜಿ ಟ್ರೋಫಿ ಗೆಲ್ಲಿಸಿದ್ದು.
ಈಗಲೂ ಕಾಲ ಮಿಂಚಿಲ್ಲ. ‘ಕರ್ನಾಟಕ’ದ ಬಗ್ಗೆ ಹೆಮ್ಮೆ, ಅಭಿಮಾನವೇ ಇಲ್ಲದೆ ಆಡುತ್ತಿರುವವರನ್ನು ಮುಲಾಜಿಲ್ಲದೆ ಹೊರಗಟ್ಟಿ. ಕೇವಲ Reputation ಮೇಲೆಯೇ ಆಡುತ್ತಿರುವವರಿಗೆ ಗೇಟ್ ಪಾಸ್ ಕೊಟ್ಟು, ರನ್ ಹಸಿವಿರುವವರಿಗೆ ಅವಕಾಶ ಕೊಡಿ. ಯಾಕೆ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ನೋಡಿಯೇ ಬಿಡೋಣ. ಮಾತನ್ನು ಕೃತಿಯಲ್ಲಿ ಮಾಡಿ ತೋರಿಸಿ Roger Binnyಯವರೇ..!